ಯುವ ಕಲಾವಿದರು ಯಕ್ಷಗಾನ ಸಂಸ್ಕಾರ ಅರಿಯಲಿ : ಹರ್ಷೇಂದ್ರ ಕುಮಾರ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 2 , 2015
|
ನವೆ೦ಬರ್ 2, 2015
|
ಯುವ ಕಲಾವಿದರು ಯಕ್ಷಗಾನ ಸಂಸ್ಕಾರ ಅರಿಯಲಿ : ಹರ್ಷೇಂದ್ರ ಕುಮಾರ್
ಬೆಳ್ತಂಗಡಿ :
ಯುವ ಕಲಾವಿದರು ಹಿರಿಯ ಕಲಾವಿದರ ಕಲಾತನ, ಯಕ್ಷಗಾನ ಸಂಸ್ಕಾರಗಳನ್ನು ಅರಿತು ಮುನ್ನಡೆಯಬೇಕಾದ್ದು ಅವಶ್ಯ ಎಂದು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹೇಳಿದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ವಠಾರದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಸಹಭಾಗಿತ್ವದಲ್ಲಿ ನೆಡ್ಳೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ ಮಂಗಳೂರು ಹಾಗೂ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅನುಗ್ರಹ ಮಾರ್ಗದರ್ಶನದಲ್ಲಿ ಅ. 25ರಿಂದ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹ, ಯಕ್ಷಗಾನ ಬಯಲಾಟ ಸಪ್ತಾಹದ ಸಮಾರೋಪದಲ್ಲಿ ಶನಿವಾರ ಯಕ್ಷ ಋಷಿ, ಯಕ್ಷಗಾನ ಪ್ರಾಚಾರ್ಯ ಹೊಸ್ತೋಟ ಮಂಜುನಾಥ ಭಾಗವತ ಅವರಿಗೆ ಕುರಿಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜನರಿಗೆ ಉತ್ತಮ ಸಂದೇಶ ನೀಡುವ ಸಾಧನ ಯಕ್ಷಗಾನ. ಜನರು ಅದರಲ್ಲಿನ ಉತ್ತಮ ವಿಚಾರಗಳನ್ನು ತಿಳಿದುಕೊಂಡು ತೆರಳುತ್ತಾರೆ. ಹೀಗಾಗಿ ಅದರಲ್ಲಿನ ಕಲಾವಿದರು ಈ ಸಂದೇಶ ವಾಹಕಗಳಾಗಿರುವುದು ಮುಖ್ಯ. ಯುವ ಕಲಾವಿದರಲ್ಲಿ ತರಬೇತಿಯೊಂದಿಗೆ ಕಲೆಯ ಸಂಸ್ಕಾರವೂ ಇರಬೇಕು ಎಂದ ಅವರು, ಇಂದು ಹಿರಿಯ ಕಲಾವಿದರ ಸ್ಥಾನಕ್ಕೆ ಅನೇಕ ಯುವ ಕಲಾವಿದರು ಕಾಣುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಅಂಬಾತನಯ ಮುದ್ರಾಡಿ ಅವರು ಕುರಿಯ ವಿಠಲ ಶಾಸ್ತ್ರಿಗಳ ಸಂಸ್ಮರಣೆ ಮಾಡಿದರೆ, ಬಹುಶ್ರುತ ವಿದ್ವಾಂಸ, ವಿಮರ್ಶಕ, ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಅವರು ನೆಡ್ಳೆ ನರಸಿಂಹ ಭಟ್ಟರ ಹಾಗೂ ಭಾಗವತ ಕಾಳಿಂಗ ನಾವಡರ ಸಂಸ್ಮರಣೆ ಮಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 47 ವರ್ಷಗಳಿಂದ ಕಲಾ ಕೈಂಕರ್ಯ ನಿರತ ಯಕ್ಷ ಕೌಶಿಕ ಕೆ. ಗೋವಿಂದ ಭಟ್ ಅವರಿಗೆ 75 ತುಂಬಿದ ಸಂತೃಪ್ತಿಗಾಗಿ, 27 ವರ್ಷಗಳಿಂದ ಕಲಾಕೈಂಕರ್ಯ ನಿರತ ಭಾಗವತ ಹಂಸ ಪುತ್ತಿಗೆ ರಘುರಾಮ ಹೊಳ್ಳರ 60ರ ಸಂಭ್ರಮಕ್ಕಾಗಿ ಹಾಗೂ ಯಕ್ಷರಂಗದ ಸಮರ್ಥ ಬಾಲಪ್ರತಿಭೆ ಯಕ್ಷ ಕಿಶೋರಿ ರಂಜಿತಾ ಎಲ್ಲೂರು ಅವರನ್ನು ಸಮ್ಮಾನಿಸಲಾಯಿತು.
ಕಲಾವಿದರಾದ ಕೆ. ರಘುನಾಥ ರೈ, ಹರ್ಷನಾರಾಯಣ ಮೂರ್ತಿ, ಮೋಹನ ಬೈಪಾಡಿತ್ತಾಯ, ಮೋಹನ ಕಲ್ಲೂರಾಯ, ಸೂರ್ಯನಾರಾಯಣ ಭಟ್, ಶರತ್ ಕುಮಾರ್ ಕದ್ರಿ ಅವರನ್ನು ಗೌರವಿಸಲಾಯಿತು. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೆಸರ ಯು. ವಿಜಯರಾಘವ ಪಡ್ವೆಟ್ನಾಯ, ಕುರಿಯ ವೆಂಕಟ್ರಮಣ ಶಾಸ್ತ್ರಿ, ನೆಡ್ಳೆ ರಾಮ ಭಟ್ ಉಪಸ್ಥಿತರಿದ್ದರು.
ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಎನ್. ಅಶೋಕ ಭಟ್ ಸ್ವಾಗತಿಸಿದರು. ಆಯೋಜಕರಾದ ಕೆ. ಸುರೇಶ ಕುದ್ರೆಂತಾಯ ವಂದಿಸಿದರು. ಡಾ. ಶ್ರುತಕೀರ್ತಿ ರಾಜ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಕುಶಲವ ತಾಳಮದ್ದಳೆ ಕಾರ್ಯಕ್ರಮದ ಬಳಿಕ ವಿಶ್ವಾಮಿತ್ರ ಯಕ್ಷಗಾನ ಬಯಲಾಟ ನಡೆಯಿತು.
ಧರ್ಮಸ್ಥಳ ಮೇಳದಲ್ಲಿ ಯುವ ಕಲಾವಿದರನೇಕರು ಇದ್ದಾರೆ. ಹಿರಿಯ ಕಲಾವಿದ ಕೆ. ಗೋವಿಂದ ಭಟ್ಟರದ್ದು ಮೇಳದಲ್ಲಿ ಅನನ್ಯ ಸೇವೆ ಮಾಡಿದ್ದಾರೆ. ಒಂದೇ ಒಂದು ದಿನ ಸಮಸ್ಯೆಯನ್ನು ಅವರಿಂದ ನಾನು ಎದುರಿಸಿಲ್ಲ. ನಮ್ಮ ಮೇಳ ಟೆಂಟ್ ವ್ಯವಸ್ಥೆಯಿಂದ ದೂರ ಸರಿದು ಬಯಲಾಟದತ್ತ ಮುಖ ಮಾಡಿತ್ತು. ಈಗ 5 ತಾಸಿನ ಕಾಲಮಿತಿಯ ಪ್ರಯೋಗದತ್ತ ಹೊರಟಿದೆ. - ಡಿ. ಹರ್ಷೇಂದ್ರ ಕುಮಾರ್
ಕೃಪೆ :
vijaykarnataka
|
|
|